Friday, February 3, 2017

ಮೌನ ಮಾತಾದಾಗ ಮಾತು ಮೌನವಾಗುವುದೇ?!

ರವಣಿಗೆ ಒಂದು ವ್ಯಸನ ಹೌದು. ಬರವಣಿಗೆ ಅನುಭವವೂ ಹೌದು. ಬರವಣಿಗೆ ಅಭಿವ್ಯಕ್ತಿಯೂ ಹೌದು. ಆದರೆ ಬರವಣಿಗೆಯೇ ಜೀವನ?! ನನ್ನ ಪಾಲಿಗಂತು ಅದೂ ಹೌದು. ಬರೆಯಲು ನನಗೆ ಕಾರಣವೂ ಬೇಡ ಪ್ರೇರಣೆಯೂ ಬೇಡ... ಬರವಣಿಗೆ ನನ್ನ ಜೀವನದ ಅವಿಭಾಜ್ಯ ಅಂಗ.


ದಕ್ಕೆ ಕಾರಣ ಏನು ಎಂದು ಯೋಚಿಸಿ ಕುಳಿತಾಗ ನನ್ನ ಜೀವನದ ಮೊಟ್ಟ ಮೊದಲ ಬರಹ ನೆನಪಾಯಿತು.


ನಾನು ಹುಟ್ಟಿನಿಂದಲೂ ಒಬ್ಬ ಕತೆಗಾರ. ಇದ್ದ ವಿಷಯವನ್ನು ಇದ್ದ ಹಾಗೆ ಹೇಳಲಾಗದೆ ನನ್ನ ಕಲ್ಪನೆಯ ಝರಿಯನ್ನು ಹರಿಯಬಿಟ್ಟು ರೋಚಕತೆಯನ್ನು ವಾಸ್ತವಕ್ಕೆ ಹೆಣೆದು ಉದ್ದುದ್ದ ಕಥೆಗಳನ್ನು ಹೇಳುತ್ತಿದ್ದವನು ನಾನು. ಬಹುತೇಕ ಪ್ರಸಂಗಗಳಲ್ಲಿ ನಾನು ಮಾತಾಡಿದ ನಂತರ ಹಲವರು ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಗೇಲಿ ಮಾಡಿರುವುದುಂಟು. ಆದರೆ ಆ ಕಥೆಗಳು ಎಂದೂ ನನಗೆ ಸುಳ್ಳು ಎಂದು ಅನಿಸಿರಲಿಲ್ಲ. ನಾನು ಆ ಕಥೆಗಳನ್ನು ಅದರಲ್ಲಿ ಮಿಳಿತವಾಗಿದ್ದ ಭಾವನೆಗಳನ್ನು ಅನುಭವಿಸಿರುತ್ತಿದ್ದೆ. ಆ ಘಟನೆಗಳನ್ನು ಪ್ರತ್ಯಕ್ಶವಾಗಿ ಅಲ್ಲದಿದ್ದರೂ ನನ್ನ ಕಲ್ಪನಾ ಜಗತ್ತಿನಲ್ಲಿ ನಾನು ಜೀವಿಸಿರುತ್ತಿದ್ದೆ. ಬೇರೆಯವರಿಗೆ ಆ ರೀತಿಯ ಅನುಭವ ಸಿಗಲಿಲ್ಲ ಎಂದ ಮಾತ್ರಕ್ಕೆ ಅವು ಸುಳ್ಳಾಗಲು ಸಾಧ್ಯವಿಲ್ಲ ಎಂಬ ಧೋರಣೆಯಲ್ಲೇ ನಾನು ಆ ಕಕ್ಷಣಕ್ಕೆ ಸುಮ್ಮನಾದರೂ ಮತ್ತೆ ಹೊಸ ಕಥೆಗಳನ್ನು ಹೆಣೆಯೋದನ್ನ ಎಂದು ನಿಲ್ಲಿಸಲಿಲ್ಲ. 


ರೀತಿ ಬದುಕುತ್ತಿರುವಾಗಲೇ ಒಂದು ದಿನ ಶಾಲೆಯಲ್ಲಿ "ಪಿಕ್ ಅಂಡ್ ಸ್ಪೀಕ್" ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ನನ್ನ ತರಗತಿಯಲ್ಲಿ ಅತ್ಯಂತ ಹೆಚ್ಚು ಮಾತಾಡುತ್ತಿದ್ದವ ನಾನೆ. ಹಾಗಾಗಿ ನನ್ನ ಕ್ಲಾಸ್ ಟೀಚರ್ ನನ್ನನ್ನೇ ಆಯ್ಕೆ ಮಾಡಿ ಆ ಸ್ಪರ್ಧೆಗೆ ಕಳಿಸಿದರು. ನನ್ನ ಸರದಿ ಬಂದಾಗ ನನಗೆ ಸಿಕ್ಕ ವಿಷಯ "ಡ್ರೀಮ್". ಕನಸುಗಾರಿನಗೆ ಕನಸಿನ ಬಗ್ಗೆ ಮಾತಾಡೋದು ಕಷ್ಟವೇ?! ಆರಂಭಿಸಿದೆ ನನ್ನ ಮಾತನ್ನು. ಕೊಂಚ ದಿನಗಳ ಹಿಂದಷ್ಟೇ ನಾ ಕಂಡಿದ್ದ ಒಂದು ವಿಚಿತ್ರ ಕನಸಿನ ಕಥೆಯಾಗಿತ್ತದು. ಜನರೇ ಇಲ್ಲದ ಊರಿನಲ್ಲಿ ಒಬ್ಬನೇ ಬದುಕುತ್ತಿದ್ದ ಸಾಹಸಿ ಗಂಡು ನಾನಾಗಿದ್ದೆ. ಆ ಊರಿನ ಉತ್ತರಕ್ಕೆ ಒಂದು ದೊಡ್ಡ ಜಲಪಾತ. ಆಗಸದಷ್ಟು ಎತ್ತರವಿದ್ದ ಆ ಜಲಪಾತದಿಂದ ಧುಮುಕಿದ ನೀರು ದಕ್ಷಿಣಕ್ಕೆ ಹರಿದು ಸಾಗರವನ್ನು ಸೇರುತ್ತಿತ್ತು. ಆ ಜಲಪಾತ ಎರಡೂ ಬದಿಗಳಲ್ಲೂ ದೊಡ್ಡ ಅರಣ್ಯ. ಅಣಬೆಗಳು ಹೆಮ್ಮರದಂತಿದ್ದವು. ಹುಲ್ಲು ಬಿದಿರು ಮರಗಳಷ್ಟು ಎತರಕ್ಕೆ ಬೆಳೆಯುತ್ತಿದ್ದವು. ಹಲವು ಹಣ್ಣುಗಳು ಒಂದೆ ಪುಟ್ಟ ಮರದಲ್ಲಿ ಬಿಡುತ್ತಿದ್ದವು. ಆ ಮರ ಒಳ್ಳೆ ಬಾನ್ಸಾಯ್ ಮರದಂತೆ ಕುಬ್ಜ ಮರ. ಆನೆಗಳಿಗೆ ರೆಕ್ಕೆಗಳಿದ್ದವು. ಕುದುರೆಗಳ ಕಾಲಿ ಸೊಳ್ಳೆಗಳ ಕಾಲಿನಂತೆ ಸಪೂರ ಇದ್ದವು. ಈ ರೀತಿ ಪ್ರಾಕೃತಿಕ ನಿಯಮಗಳನ್ನೆಲ್ಲ ಮೀರಿದ ಒಂದು ಲೋಕದ ವಿಚಿತ್ರ ಕನಸಿನ ಕಥೆ. ಆ ಕಥೆಯನ್ನು ಹೇಳುತ್ತಾ ನಾನೆಷ್ಟು ಮೈ ಮರೆತಿದ್ದನೋ ಕೇಳುತ್ತಿದ್ದವರೂ ಅಷ್ಟೇ ಮೈ ಮರೆತಿದ್ದರು. ನನ್ನ ಕಥೆಯು ಮುಗಿದ ಮೇಲೆ ಜೋರು ಚಪ್ಪಾಳೆಯ ಶಬ್ಧ. ನನ್ನ ಮನಸ್ಸು ಇನ್ನಷ್ಟು ಹಿಗ್ಗಿತು. ಸ್ಪರ್ಧೆಯ ನಂತರ ಬಹುಮಾನ ವಿತರಣೆಯ ಸಮಯದಲ್ಲಿ ನನಗೆ ಒಂದು ದೊಡ್ಡ ಆಘಾತವೇ ಆಯ್ತು. ತೀರ್ಪುಗಾರರು ನನ್ನ ಮಾತನ್ನು ಹೊಗಳಿದರು ಆದರೆ ಕೊಟ್ಟ ಕಾಲಾವಧಿಗಿಂತ ಮೀರಿ ಮಾತಾಡಿದ್ದೆ ನಾನು ಎಂದು ಹೇಳಿ ನನ್ನನ್ನು ಸ್ಪರ್ಧೆಯಿಂದ ಡಿಸ್ ಕ್ವಾಲಿಫೈ ಮಾಡಿಬಿಟ್ಟರು. ನನ್ನ ತರಗತಿಯವರೆಲ್ಲಾ ಈ ಮುಂಚೆನೆ ನನ್ನನ್ನು ಬೊಗಳೆದಾಸ... ಬಂಡಲ್ಪುರ್ಕ... ರೈಲು ಬಿಡ್ತೀನಿ ಅಂತೆಲ್ಲಾ ಅಣುಕಿಸುತ್ತಿದ್ದಿದ್ದುಂಟು. ಈಗ ಆಗಿರುವ ಪ್ರಮಾದದಿಂದ ನನಗೆ ಇನ್ನಷ್ಟು ಅವಮಾನ ತಪ್ಪಿದ್ದಲ್ಲ ಎಂದೆನಿಸಿತು. ಬೇಸರಗೊಂಡೆ. ನನ್ನನ್ನೇ ನಾನು ಶಪಿಸಿಕೊಂಡೆ. ಕುಗ್ಗಿದೆ. 


ಅಂದಿನಿಂದ ಸರಿಸುಮಾರು ಒಂದು ತಿಂಗಳು ಕ್ಲಾಸಿನಲ್ಲಿ ಆದ ಅವಮಾನದಿಂದ ಯಾವುದರ ಮೇಲೂ ಗಮನ ಕೊಡದೆ ನನ್ನ ಸೋಲಿನ ಬಗ್ಗೆಯೇ ಚಿಂತಿಸುತ್ತಾ ಕುಳಿತೆ. ಆಟ ಪಾಠ ಎಲ್ಲವನ್ನು ಮರೆತೆ. ಇದರಿಂದಾಗಿ ನನ್ನ ವ್ಯಾಸಂಗವೂ ಕುಂಟಿತವಾಯ್ತು. ಕ್ಲಾಸ್ ಟೆಸ್ಟಿನಲ್ಲಿ ಫೇಲ್ ಆದೆ. ಕ್ಲಾಸ್ ಟೀಚರ್ ಮಾರ್ಕ್ಸ್ ಕಾರ್ಡ್ ಕೊಟ್ಟು ನನ್ನ ಡೈರಿಯಲ್ಲಿ ತಂದೆ ಅಥವ ತಾಯಿ ಯಾರಾದರು ಒಬ್ಬರು ಬಂದು ಕಾಣಬೇಕು ಎಂದು ಬರೆದು ಕಳಿಸಿದರು. ದಿಕ್ಕು ತೋಚದಂತಾಯ್ತು. ಮನೆಯಲ್ಲಿ.ವಿಷಯ ತಿಳಿದರೆ ನನ್ನನ್ನು ಕೊಂದರು ಬಿಡುವರೇನೋ ಎಂಬಂತೆ ಭಯ ಆಕ್ರಮಿಸಿಕೊಂಡಿತು. ಮನೆಗೆ ಬಂದವನೇ ಅಮ್ಮನಿಗೆ ಮಾರ್ಕ್ಸ್ ಕಾರ್ಡ್ ತೋರಿಸಿದೆ. "ಏನೋ ಇದು ಫೇಯ್ಲ್ ಅಂತಿದೆ?" ಎಂದು ಅಮ್ಮ ಗದರಿದಳು. ಅಮ್ಮನ ಪ್ರಶ್ನೆಗೆ ಉತ್ತರ ಆಗಲೆ ತಾಯಾರಿಟ್ಟುಕೊಂಡಿದ್ದ ನಾನು "ಮಿಸ್ಸು ಕರೆಕ್ಶನ್ ಸರಿಯಾಗಿ ಮಾಡಿಲ್ಲಾ ಅಂತ ಇಡೀ ಕ್ಲಾಸು ಕಂಪ್ಲೇಂಟು ಮಾಡ್ತಿದೆ. ಪ್ರತಿ ಸಲ ಫಸ್ಟು ರಾಂಕು ವರ್ತಿಸದೆ ಸತೀಶನ್ನು ಫೇಯ್ಲ್ ಮಾಡಿದಾರೆ. ನಾಳೆ ಎಚ್.ಎಂ. ಹತ್ರ ಸತೀಶನ ಅಮ್ಮ ಹೋಗ್ತಿದಾರೆ ಮಾತಾಡೋಕೆ. ನೀನೇನು ತಲೆ ಕೆಡಿಸ್ಕೊಬೇಡ. ಮತ್ತೆ ಇನ್ನೊಂದು ಸಲ ಕರೆಕ್ಷನ್ ಮಾಡಿಸ್ತಾರಂತೆ..." ಎಂದು ಉದ್ದೇಶ ಪೂರ್ವಕವಾಗಿ ಬೊಗಳೆ ಬಿಟ್ಟೆ. ಅಮ್ಮ ಆಗಲಿ ಎಂದು ಸುಮ್ಮನಾದಳು. ಡೈರಿಯಲ್ಲಿ ಇದ್ದ ಟೀಚರ್ ನ ರಿಮಾರ್ಕ್ ಪಕ್ಕದಲ್ಲಿ ನನ್ನ ತಾಯಿಯೇ ಬರೆಯುವಂತೆ ನಾನು ಒಂದು ಪತ್ರವನ್ನು ಬರೆದೆ. ಅದರ ಒಕ್ಕಣೆ ಸಾರಾಂಶ ಹೀಗಿತ್ತು. " ಕ್ಷಮಿಸಿ. ಮನೆಯಲ್ಲಿ ಸಾವು ಸಂಭವಿಸಿದೆ. ನನ್ನ ನಾದಿನಿಯ ಗಂಡ ಆಕ್ಸಿಡೆಂಟಿನಲ್ಲಿ ತೀರಿಕೊಂಡಿದ್ದಾರೆ. ಹಾಗಾಗಿ ಒಂದು ತಿಂಗಳಿಂದ ನನ್ನ ಮಗನ ಓದಿನ ಕಡೆ ಗಮನ ನೀಡಲಾಗಿಲ್ಲ" ಎಂದು ಬರೆದು ಅಮ್ಮನ ಸಹಿ ನಾನೆ ಹಾಕಿದೆ.

ಟೀಚರ್ ಅದನ್ನು ಓದಿದರು. ಆಗಲಿ ಎಂದು ತಲೆ ಆಡಿಸಿ ಸುಮ್ಮನಾದರು. ಎಲ್ಲಾ ಮುಗಿಯಿತು ಎಂದುಕೊಂಡು ನಿಟ್ಟುಸಿರು ಬಿಟ್ಟೆ. 


ಕೆಲವು ದಿನಗಳ ನಂತರ ನನ್ನ ತಾಯಿ ನನ್ನ ಸ್ಕೂಲ್ ಡೈರಿಯನ್ನು ಏನಕ್ಕೊ ತೆಗೆದವಳು ನಾನು ಬರೆದಿದ್ದ ಪತ್ರವನ್ನು ಕಂಡು ಸಿಟ್ಟಾಗಿ ನನಗೆ ನಾಲ್ಕು ಬಾರಿಸಿ ಮರುದಿನವೇ ಬಂದು ನಮ್ಮ ಟೀಚರನ್ನು ಭೇಟಿ ಮಾಡಿದರು. ನಾನು ಬರೆದಿರುವುದು ಸುಳ್ಳು. ನನ್ನ ನಾದಿನಿ ವಿಧವೆಯಾಗಿದ್ದು ಇವನು ಹುಟ್ಟೋಕೆ ಮುಂಚೆನೆ. ಸಾಲದಕ್ಕೆ ನೀವೆ ಸರಿಯಾಗಿ ಕರೆಕ್ಷನ್ ಮಾಡಿಲ್ಲ ಅಂತ ಸುಳ್ಳು ಬೇರೆ ಹೇಳಿದಾನೆ ಎಂದು ಟೀಚರ್ ಮುಂದೆ ಮತ್ತೆ ದಂಡಂ ಡಶಗುಣಂ ಮಾಡಿದಳು. ನನ್ನ ಟೀಚರ್ ನನ್ನ ಮೇಲೆ ಕೋಪಿಸಿಕೊಳ್ಳೋದು ಬಿಟ್ಟು ಪ್ರತಿಯಾಗಿ  ಅಮ್ಮನಿಗೆ ನನ್ನ ಬಗ್ಗೆ ಒಂದು ಮಾತನ್ನು ಹೇಳಿದರು. "ಸ್ಪರ್ಧೆಯಲ್ಲಿ ಸೋತಿದ್ದಕ್ಕೆ ನಿಮ್ಮ ಮಗ ಕುಗ್ಗಿದ್ದಾನೆ. ಅವನಿಗೆ ಇರುವ ಕಲ್ಪನಾಶಕ್ತಿಯನ್ನು ಹರಿದುಬಿಡಲು ಅವಕಾಶಗಳಿಲ್ಲದೇ ಒದ್ದಾಡುತ್ತಿದ್ದಾನೆ. ಇವನು ಒಬ್ಬ ಉತ್ತಮ ಕತೆಗಾರ. ಇವನಲ್ಲಿರುವ ಈ ಶಕ್ತಿಯನ್ನು ಇನ್ನಷ್ಟು ಪೋಷಿಸಿ" ಎಂದು...


ನ್ನ ಜೀವನವನ್ನೇ ಬದಲಾಯಿಸಿದ ದಿನವದು. ಟೀಚರ್ ನನಗೆ ಪ್ರತಿ ದಿನ ಒಂದು ಸುಳ್ಳು ಬರೆದು ತಾ ಎಂದು ಆಜ್ಞೆ ಮಾಡಿದರು. ನನ್ನಲ್ಲಿದ್ದ ಕಥೆಗಳನ್ನು ಹೊರಗೆ ಚೆಲ್ಲಲು ಒಂದು ಅವಕಾಶ ಮಾಡಿಕೊಟ್ಟರು. ಬರವಣಿಗೆ ಎಂದರೇನು ಎಂದು ತಿಳಿಸಿಕೊಟ್ಟರು. 


ಬೊಗಳೆ ಆಡುತ್ತಿದ್ದ ಬಾಯಿ ಮೌನವಾಯ್ತು... ಮೌನದ ಪರಿಣಾಮದಿಂದಾಗಿ ಗೀಚಿದ ಬೊಗಳೆಗಳು ಓದುಗರರ ಬಾಯಲ್ಲಿ ಮಾತಾದವು.


ಮೌನ ಮಾತಾದಾಗ... ಮಾತು ಮೌನವಾಗಿತ್ತು...